ದೇವರ ನಂಬಿಕೆ , ಹುಡುಕಾಟ , ಸಾವ ಭಯ ಹಾಗು ಅದರೆಡಗಿನ ತಿರಸ್ಕಾರ ಮನುಕುಲವನ್ನು ಬಿಟ್ಟು ಬಿಡದೆ ಕಾಡಿದ , ಕಾಡುತ್ತಿರುವ , ಕಾಡುವ ಪ್ರಶ್ನೆಗಳು .ನಮ್ಮಲ್ಲಿ ಎಲ್ಲಾ ತತ್ವಗಳು ನಾಸ್ತಿಕತೆ ಮತ್ತು ಆಸ್ತಿಕತೆಯ ನಡುವೆಯೇ ಹಂಚಿಹೊಗಿವೆ . ನನ್ನ ಸ್ನೇಹಿತನೊಬ್ಬನ ಚಿಂತನೆಯಂತೆ ದೇವರು ಒಂದು ಬಗೆಹರಿಸಲಾರದ ಸಮೀಕರಣ , ಸಾಮಾನ್ಯರಿಗೆ ದೇವರ ಹುಡುಕಾಟದ ವಾಂಛೆ ಹುಟ್ಟಿದರೆ ಇಡಿ ಜೀವಮಾನ ಅವರು ಅದರ ಸುತ್ತ ತಿಣುಕಾಡುತ್ತಾರೆ , ಸೋಲುತ್ತಾರೆ , ಗೆಲ್ಲುತ್ತಾರೆ , ಬೀಳುತ್ತಾರೆ , ಏಳುತ್ತಾರೆ ಆದರೆ ಅವರು ಓಡಿ ಹೋಗುವುದ್ದಿಲ್ಲ , ಬಿರುಬಿಸಿಲಿನಲ್ಲಿ ನಿಲ್ಲುತ್ತಾರೆ , ಚಳಿಯ ಕೊರೆತ , ಮಳೆಯ ಬೀಸು , ಸಾವ ಕಳವು , ರೋಗ, ಮುಪ್ಪು ಹಸಿವು ಮ್ ಮ್ ! ಯಾವುದು ಅವರ ಕಾಲ ಕೆಳಗಿನ ನೆಲ ಕಸಿಯಲಾರದು ಸಾಯುವ ಕಡೆಯ ಕ್ಷಣದವೆರೆಗೂ , ನಂಬಿಕೆ ನೀಡುವ ಅಭಯ ಅದರಲ್ಲೂ ದೈವದ್ದು ಅತೀ ದೂರ ಸಲಹುತ್ತದೆ.
ಇದಕ್ಕೆ ಮೂಲ ಎಲ್ಲಿಂದ ಮನುಕುಲದ ಬೌದ್ದಿಕ ಪರಾಮರ್ಶೆ ಗಳು ಅಂದರೆ ವಿಜ್ಞಾನದ ಪರಿಧಿ ಎಲ್ಲಿ ಮುಗಿಯುವುದೋ ಅಲ್ಲಿಂದ ದೈವದ ಅರಿವಿಕೆ ಮತ್ತು ವ್ಯಾಪ್ತಿಯ ಅವಲೋಕನ ಶುರುವಾಗುತ್ತದೆ , ಅದು ಹೇಗೆ ಮುಂದುವರೆಯುತ್ತದೆ , ಹೇಗೆ ಮುಗಿಯುತ್ತದೆ ಇದು ಅವರವರ ಭಾವಕ್ಕೆ ಮತ್ತು ಭಕುತಿಗೆ ಬಿಟ್ಟ ಸತ್ಯ .
ಅನಂತಮೂರ್ತಿಯವರು ಒಮ್ಮೆ ಯಾವುದೋ ಸಂದರ್ಶನದಲ್ಲಿ ಹೇಳಿದ್ದು ನೆನಪು ದೇವರ ನಂಬಿದ ಅಥವಾ ಹಾಗೆ ಅಂದು ಕೊಳ್ಳುಲು ಪ್ರಯತ್ನಿದ ಕೂಡಲೇ ಇಡಿ ಬದುಕಿನೆಡಗಿನ ದೃಷ್ಟಿಕೋನ ಮತ್ತು ಬದುಕುವ ರೀತಿ ಬದಲಾಗುವುದು !! ಇದು ಅಕ್ಷರಶ: ನಿಜ , ದೇವರ ನಂಬದವರಿಗೆ ನೈತಿಕತೆ ಕೇವಲ ಮಾಡುವ ಕೆಲಸಕ್ಕೆ ಬೇಲಿಯಾದರೆ , ನಂಬಿದವರಿಗೆ ಭಾವನೆಗಳ, ಯೋಚನೆಗಳ ಸುತ್ತ ನೈತಿಕತೆ ಗಸ್ತು ತಿರುಗುತ್ತದೆ . ಒಂದು ವಿಧದಲ್ಲಿ ನೈತಿಕ ಸರಹದ್ದು ಮನಸ್ಸಿನ ಮಟ್ಟಿಗೆ ಇದ್ದರೆ ವ್ಯಕ್ತಿತ್ವ ಪಕ್ವವಾಗಬಹುದಾ ?? ಗೊತ್ತಿಲ್ಲ , ಆದರೆ ನಮ್ಮೊಳಗೇ ಬಿಟ್ಟು ಬಿಡದೆ ಒಂದು ಸಮರ ನಡೆಯುವುದಂತು ದಿಟ . ಎಷ್ಟೋ ಬಾರಿ ಮತ್ತೊಬ್ಬರೊಟ್ಟಿಗೆ , ಸಮಾಜದೊಟ್ಟಿಗೆ ಆಡುವ ಯುದ್ದಗಳಿಂದ ಹಾಗುವ ಹಾನಿಗಿಂತ ವಾಸಿ ಈ ಮನಸ್ಸು ಮತ್ತು ಬುದ್ದಿಯ ಕಾಳಗ.
ಇಲ್ಲಿ ನಾನು ಬಳಸಿದ ದೈವದ ಮೂರ್ತಕ್ಕೆ ಧರ್ಮದ ಅಂಕುಶ ಇಲ್ಲ , ರಾಮಕೃಷ್ಣರ ಮಾತಂತೆ ಎಲ್ಲ ಧರ್ಮಗಳು ಒಂದೇ ಗುರಿಯ ತಲುಪಲು ಹೋರಾಟ ಬೇರೆ ಬೇರೆ ರಸ್ತೆಗಳ?? ಇರಬಹುದು ಮನುಷ್ಯರೆಲ್ಲರಲ್ಲೂ ಇರುವ ಸಾಮ್ಯ ಇದಕ್ಕೆ ಸಾಕ್ಷ್ಯದಂತಿರುವುದನ್ನು ಅಲ್ಲಗೆಳೆಯಲಾರೆ . ಅವರೇ ಹೇಳಿದಂತೆ ತಾಯಿ ಒಂದೇ ಪದಾರ್ಥದಲ್ಲಿ ತನ್ನ ಕುಟುಂಬದ ಪ್ರತಿಯೊಬ್ಬರಿಗೂ ಮಾಡುವ ಅನನ್ಯ ಭಕ್ಷ್ಯಗಳಂತೆ ಧರ್ಮ?? ಇರಬಹುದು , ಮತ್ತೆ ಅದೇ ಅವರವರ ಭಾವಕ್ಕೆ , ಅವರವರ ಭಕುತಿಗೆ .
ನಾನೇಕೆ ಈ ವಿಷಯವಾಗಿ ಇಷ್ಟೊಂದು ಹೇಳಿದೆ ??! ನಾನು ನಂಬಿಕೆಯನ್ನು ಪ್ರತಿಪಾದಿಸುತ್ತಿಲ್ಲ , ಅಥವಾ ನಾಸ್ತಿಕತೆಯನ್ನು ಈಗಳೆಯುತ್ತಿಲ್ಲ . ನಾನು ಇತೀಚಿಕೆ ಎದುರುಗೊಂಡ ಕೆಲವು ಘಟನೆಗಳ ಬಗ್ಗೆ ವಿವರಣೆಗೆ ಮಾಡಿಕೊಂಡ ಸಣ್ಣ ಪೀಠಿಕೆ ಇದಷ್ಟೆ .
ಮೊದಲೆನೆಯದು .....
ಅವರು ಸುಮಾರು ೬೦ ವಯಸ್ಸಿನವರಿರಬಹುದು , ದಿನ ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಹತ್ತುತ್ತಲೋ ಇಳಿಯುತ್ತಲೋ , ಲಲಿತ ಸಹಸ್ರ ನಾಮ ಓದುತ್ತ ಸಿಗುತ್ತಾರೆ . ತುಂಬಾ ಸಲ ನೋಡಿದ ಮೇಲೆ ಅವರೆಡೆಗೆ ಸಣ್ಣ ಕುತೂಹಲ ಮೂಡಿತು . ಕಳೆದ ವಾರ ಬೆಟ್ಟ ಇಳಿದು ಊರ ಕಡೆಗೆ ಹೊರಟಾಗ ದಾರಿಯಲ್ಲಿ ಅವರನ್ನು ಕಂಡೆ . ಸುಮ್ಮನೆ ನೋಡಿದೇ , ಮತ್ತೆ ಅವರ ಮಾತಾಡಿಸಲು ಸಂಕೋಚ , ಅವರೇ ಮಾತಾಡಿಸಿದರೆ ಸರಾಗ ಎಂದೆಣಿಸಿ ಅವರಿಗೆ ಹಿಂದಾಗಿ ಒಂದೆರಡು ಹೆಜ್ಜೆಯಷ್ಟು ಜಾಗ ಕೊಟ್ಟು ನಡೆಯತೊಡಗಿದೆ . ಒಂದು ನೂರು ಮೀಟರು ನಡೆಯುಷ್ಟರಲ್ಲಿ ಅವರಿಗೆ ನನ್ನ ಬಗ್ಗೆ ಏನನಿಸಿತೋ ಏನೋ ತಿರುಗಿ ನೋಡಿ ಪರಿಚಯದ ನಗೆ ನಕ್ಕರು , ಅಷ್ಟಕ್ಕೇ ಕಾಯುತ್ತಿದ ನಾನು ಅವರನ್ನು ಮಾತಿಗೆಳೆದೆ .
"ನೀವು ಇಲ್ಲೇ ಇರ್ತೀರಾ ? ನಿಮ್ಮನ ಇಲ್ಲೇ ಸುಮಾರ್ ಸಲಿ ನೋಡಿದೀನಿ " ನಾನು ಕೇಳಿದೆ . "ಹೌದು , ನಾನು ಇಲ್ಲೆಯೆ ಇರೋದು , ತಾಯಿ ನೋಡಕೆ ದಿನಾ ಬರ್ತೇನೆ , ನೀನು?" ತಮಿಳು ಮಿಶ್ರಿತ ಕನ್ನಡಲ್ಲಿ ಕೇಳಿದರು , ನಾನು ಸಣ್ಣ ಹಾಗುವ ಭ್ರಮೆಗೆ ಬಿದ್ದು ಈ ಬೆಟ್ಟ ಕಳೆದ ಆರು ವಾರದಿಂದ ಹತ್ತುತ್ತಿರುವುದಾಗಿಯು ಭಕ್ತಿ ಇನ್ನು ನೆತ್ತಿಗೆರಿಲ್ಲವೆಂದು ನಗೆ ಬೀರಿದೆ . ನಂತರ ತನಗೆ ಕನ್ನಡದಲ್ಲಿ ಮಾತು ಕಷ್ಟವೆಂದು ಇಂಗ್ಲಿಷಿಗೆ ಭಾಷೆ ಬದಲಿಸಿದ ಅವರು ನನ್ನ ಬಗ್ಗೆ , ನನ್ನ ಕೆಲಸದ ಬಗ್ಗೆ ವಿಚಾರಿಸಿದರು .
ನಂತರ ನನ್ನ ಆತ್ಮ ಕಥನಗಳ ಕುತೂಹಲಕ್ಕೆ( ಅಥವಾ ದೇವರ ಹುಡುಕಾಟದ ಬಗ್ಗೆ ಇರುವು ಕುತೂಹಲಕ್ಕೋ ಕಾಣೆ !) ಅವರ ಬಗ್ಗೆ ಕೇಳಲಾರಮ್ಬಿಸಿದೆ .
ಅವರ ಹೆಸರು ಎಂತದೋ(ಮರೆತೇ! ) , ಪಾಲಕಾಡಿನ ಅಯ್ಯರ್ ಬ್ರಾಹ್ಮಣರೆಂದು ಹೇಳಿಕೊಂಡರು. ಕಳೆದ ಮೂವತ್ತು ವರುಷ ಮುಂಬೈಯ ಯಾವುದೊ ಕಂಪನಿಯ ಕೆಲಸ , ಬದುಕಿನ ನೀರಸತೆಗಳು , ಈಗೆ ತಮ್ಮ ಮೂಲ ಬಿಚ್ಚಿಟ್ಟರು . ಕೊನೆಗೆ ಒಂದು ದಿನ ದೇವಿಯ ಕರೆ ಬಂದಂತೆ ಆಯಿತಂತೆ , ಅಲ್ಲಿಗೆ ಮುಂಬೈ ಮತ್ತು ಅಲ್ಲಿನ ತಮ್ಮ ಲೌಕಿಕ ಬದುಕಿನ ಅಂಟು ,ಆಸ್ತಿ , ಬಂಧುಗಳು ಎಲ್ಲ ತೊರೆದು ಬಂದರಂತೆ . ಮೊದಲಿಗೆ ಕೊಲ್ಲೂರಿನಲ್ಲಿ ನೆಲೆಸಿ ೯ ತಿಂಗಳು ಪೂಜೆ , ಜಪ ತಪಗಳಲ್ಲಿ ಲೀನವಾಗಿ ನಂತರ ಮೈಸೂರಿಗೆ ಬಂದಿದ್ದಾರೆ . ಇಲ್ಲಿ ಕಳೆದ ೫ ವರುಷಗಳಿಂದ ಬೆಟ್ಟದ ತಪ್ಪಲಿನ ದತ್ತ ಆಶ್ರಮದಲ್ಲಿ ಕೆಲವು ವರ್ಷ ಇದ್ದು ಅಲ್ಲಿ ಆಶ್ರಮಜೀವನ ದುಸ್ತಾರವಾಗಿ ಆಶ್ರಮ ಬಿಟ್ಟರಂತೆ . ಸಧ್ಯಕ್ಕೆ ಯಾರದೋ ಮನೆಯಲ್ಲಿ ಪೇಯಿಂಗ್ ಗೆಸ್ಟಾಗಿ ಇದ್ದಾರಂತೆ .
ಪ್ರತಿ ದಿನ ಬೆಟ್ಟ ಹತ್ತಿ ದೇವಿಯ ದರ್ಶನ ಮಾಡುವುದು , ಲಲಿತ ಸಹಸ್ರನಾಮ ಜಪಿಸುವುದು ಇದು ನಿತ್ಯ ಕಾಯಕ , ಇಲ್ಲಿ ದಿನಾಲೂ ಬರುವ ಪ್ರೇಮಿಗಳಿಗೆ , ವಾಯು ವಿಹಾರಿಗಳಿಗೆ ಇವರದು ತೀರ ಪರಿಚಿತ ಮುಖ .
ಮಾತು ಮುಂದುವರೆಸಿ " ಹೆಂಡತಿ ಮಕ್ಕಳು ಸಂಸಾರ ?"ಎಂದೇ , "ಇಲ್ಲ , ಬದುಕ ಜಂಜಾಟಗಳ ಮಧ್ಯೆ ಅದಕ್ಕೆ ಸಮಯವಾಗಲಿಲ್ಲ " ಎಂದರು . ನಾನು ಅವರ ಸ್ವಾತಂತ್ರ , ಬಂಧಮುಕ್ತ ಬದುಕು ಮತ್ತು ಅದರ ಸ್ವೆಚೆಗೆ ಹೊಟ್ಟೆ ಕಿಚ್ಚು ಪಟ್ಟು "ಪುಣ್ಯವಂತರು , ನೀವೇ " ಎಂದೇ , ಯಾಕೋ ಒಂದೆರಡು ಸೆಕೆಂಡು ಮೌನವಾದರು ನಂತರ "ಬಂಧನಗಳು ಇರಬೇಕು , ಬದುಕಿಗೆ ಒಂದು ಮಾನ್ಯತೆ ಇರುತ್ತದೆ " ಅಂದರು .ನಾನು ಗೊಂದಲಕ್ಕೆ ಬಿದ್ದೆ ಯಾವ ಎಕಾಂತವಿದ್ದರೆ ಜೀವನದ ಅರ್ಥದ ಉತ್ಕಲನ ಸುಲಭ ಎಂದು ಭಾವಿಸಿ ಹಾತೊರೆಯುವವೆವೋ ಆ ಏಕಾಂತವೂ , ಒಂಟಿತನವಾಗಿ , ನೀರಸವಾಗಿ ಕಾಣುವುದು ನನಗೆ ನೋವುಂಟು ಮಾಡಿತ್ತು .
ನಂತರ ಅವರು ಈ ದಿನಗಳ ಮದುವೆ , ಸಂಬಂದಗಳ ದೌರ್ಬಲ್ಯಗಳ ಬಗ್ಗೆ ಕೆಲವು ತಮ್ಮದೇ ವ್ಯಾಖ್ಯಾನಗಳ ನೀಡಿದರು . ತಮ್ಮ ಧ್ಯಾನ ,ಜಪ ತಪ, ಸಂಸ್ಕೃತದ ಶಬ್ದದಿಂದ ಉಂಟಾಗುವ ಬೌದ್ದಿಕ ಬದಲಾವಣೆಗಳು , ಹೇಗೆ ಸಂಸ್ಕ್ರತದ ಅಕ್ಷರಗಳು ತುಂಬಾ ಶಕ್ತ ಎಂಬುವುದನ್ನು ಹೇಳಿದರು , ಇಂಗ್ಲಿಷಿನ " 7 habbits of highly effective people "ನ ಕೆಲವು ಉಲ್ಲೇಖಗಳನ್ನು ಹೇಳಿ ಬದುಕು ಮತ್ತು ಅದರ ಸಾರ್ಥಕ್ಯ ಎಷ್ಟು ಮುಖ್ಯ ಎಂದು ವಿವರಿಸಿದರು . ನಾನು ತೀರ ಉತ್ಸುಕನಾಗಿ ಮಾತಿಗೆಳದದ್ದು ಅವರಿಗೆ ಹಾಗಿರಬಹುದಾದ ದೈವಾನುಭುತಿಯ ಬಗೆಗಿನ ಕುತೂಹಲಕ್ಕೆ ಆದರೆ ಅದನ್ನು ಹೇಗೆ ಕೇಳುವುದು ?? ಮುಜುಗರವಾಯಿತು (ನನ್ನ ಪ್ರಕಾರ ಪ್ರತಿಯೊಬ್ಬರ ಆಸ್ತಿಕತೆ ,ನಾಸ್ತಿಕತೆಯ ಮೂಲ ನಂಬಿಕೆಗಳು ತೀರ ವೈಯುಕ್ತಿಕ !) , ಮಾತು ಮುಂದುವರೆಸಿದೆ .ಸುಮಾರು ಅರ್ಧ ಗಂಟೆ ಅವರೊಡೆಗಿನ ಸಂವಾದ ಬರಿ ಲೌಕಿಕ ಹಾಗು ಹೋಗುಗಳ ಬಗ್ಗಿನ ಚರ್ಚೆಯಲ್ಲೆ ಕಳೆದೆ . ಕೊನೆಗೆ ಅವರೇ ತಾವು ನಿದಿರೆಯಲ್ಲೂ ಹೇಗೆ ಜಪದಲ್ಲಿ ತಮ್ಮನು ತೊಡಗಿಸಿಕೊಂದಿರುವರೆಂದು , ಇನ್ನು ಕೆಲವೇ ವರುಷದಲ್ಲಿ ತಮ್ಮಗೆ ತಮ್ಮ ಸಾಧನೆಗೆ ಪ್ರತಿಫಲ ದೊರಕಬಹುದೆಂದು ಹೇಳಿಕೊಂಡರು .
ಸಾಧನೆಯ ಹಾದಿಯಲ್ಲಿರುವ ಅವರಿಗೆ ಅಭಿನಂದಿಸಿ ಹೊರಡಲು ಅನುವಾದೆ , ನಂತರ ಏನೋ ನೆನಪಾಗಿ "ಊಟ , ತಿಂಡಿ ಹೇಗೆ ??" ಎಂದೇ , "ನಾನು ಯಾರನ್ನು ಬೇಡುವುದಿಲ್ಲ , ಕೇಳುವುದಿಲ್ಲ , ಯಾರಾದರು ಏನಾದರು ಕೊಟ್ಟರೆ ಊಟ , ಇಲ್ಲವಾದರೆ ಹಸಿವು " ಎಂದರು , ಅವರ ಬಗ್ಗೆ ಹೆಮ್ಮೆ ಎನ್ನಿಸಿತು ಅವರ ಕೈಗೆ ಸಣ್ಣದೊಂದು ಮೊತ್ತವಿತ್ತು ಅವರ ಸಾಧನೆಗೆ ಶುಭ ಕೋರಿ ಅಲ್ಲಿಂದ ಹೊರಟೆ .
ಮತ್ತೊಂದು ಘಟನೆ ...
ಮೊನ್ನೆ ಬೆಳಗಿನ್ನ ರೈಲಿನನಲ್ಲಿ ಬೆಂಗಳೂರಿಗೆ ಹೊರಟ್ಟಿದೆ , ಮಂಡ್ಯಾದಲ್ಲಿ ಹತ್ತಿದ ಒಬ್ಬ ಹುಡುಗ ಅಣೆಯಿಂದ ಮೂಗಿನಾರ್ಧದವರೆಗೆ ಒಂದು ನೀಳ ನಾಮಧರಿಸಿದ್ದ , ಬಿಳಿಯ ಬಟ್ಟೆ, ಕೈಯಲ್ಲಿ ಜಪ ಮಣಿಯ ಸಣ್ಣ ಕೈಚೀಲ , ತುಂಡು ಹೇರ್ ಕಟ್ ಒಂದು ವಿದವಾಗಿ ಆ ಬಾಲಕನ ಮುಖದಲ್ಲಿ ಏನೋ ಕಳೆ . ಪಕ್ಕದಲ್ಲಿ ಸೀಟಿನಲ್ಲಿದ ಒಬ್ಬ ಹೆಂಗಸು ಆ ಹುಡುಗನ ಕುರಿತು "ನೀನು ಜೋತಿಷ್ಯ ಹೇಳುತೀಯ ??" ಎನ್ನುವವರೆಗೂ ನಾನು ಅವನನ್ನು ಗಮನಿಸಿರಲೇ ಇಲ್ಲ . ಆಕೆಯ ಕೆಲಿಗೆ ಭಯಗೊಂಡ ಬಾಲಕ " ಇಲ್ಲ ಇಲ್ಲ " ಎಂದು ನಿಟ್ಟುಸಿರು ಬಿಟ್ಟ .
ಮತ್ತೆ ನಾನು ಅವನ ನೋಡಿ ಪರಿಚಯದ ನಗೆ ಬೀರಿ "ಏನು ಓದುತ್ತಿದಿಯ ?" ಎಂದೇ , ಆತ "ಪ್ಯರಾಮೆಡಿಕಲ್ , ಮಂಡ್ಯದಲ್ಲಿ " ಅಂದ . "ಎಸ್ ಎಸ್ ಎಲ್ ಸೀ ಯ ನಂತರವ " ಕೇಳಿದೆ , "ಇಲ್ಲ, ಪೀ ಯು ಸೀ " ಅಂದ . "ಇದೇನು ವೇಷ?ಕಾಲೇಜಿಗೂ ಈಗೇ ಹೋಗ್ತಿಯ ?" ಅಂದೆ . "ಇಲ್ಲ , ಬೇರೆ ಸಮಯದಲ್ಲಿ ಮಾತ್ರ " ಅಂದ . "ಯಾವ ಮಠ ? " ಅಂದೆ . "ಇಸ್ಕಾನ್ " ಅಂದ . "ಮಂಡ್ಯಾದಲ್ಲು ? " ಅಂದೆ , "ಹೌದು , ವಿದ್ಯಾನಗರದಲ್ಲಿ , ಸಧ್ಯಕ್ಕೆ ಮನೆಯಲ್ಲಿ ದೇವಸ್ಥಾನ ಇದೆ , ಅಲ್ಲೇ ಪೂಜೆ , ವಾಸ ಎಲ್ಲ , ಈಗ ೪ ಎಕ್ಕರೆ ಜಮೀನು ಯಾರೋ ಕಲಹಳ್ಳಿಯಲ್ಲಿ ಕೊಟ್ಟಿದ್ದಾರೆ " ಎಂದ . "ಎಷ್ಟು ವಯಸ್ಸು ? " ಅಂದೇ , "೧೭" ಅಂದ . ನೋಡಲು ಸುಮಾರು ೧೪ರ ಹಾಗೆ ಕಾಣುವ ಅವನ ವಯಸ್ಸು ಕೇಳಿ ಆಶ್ಚರ್ಯವಾದದ್ದಂತು ನಿಜ . " ಹೇಗೆ ? ಇದೆಲ್ಲ , ಎಷ್ಟು ವರ್ಷ ?" ಅಂದೆ . "ನನ್ನ ಅಕ್ಕನಿಂದ ಒಮ್ಮೆ ಬೆಂಗಳೂರಿನ ಶೇಷದ್ರಿಪುರಮ್ಮಿನ್ನಲಿ ಜಗನಾಥ ಮಂದಿರಕ್ಕೆ ಕರ್ಕೊಂಡು ಹೋದರು ಆಗಲಿಂದ ನಾನು ನಿಯತವಾಗಿ ಕೃಷ್ನಾರಾಧನೆಯಲ್ಲಿ ನಿರತನಾಗಿದ್ದೇನೆ , ಈಗ ೧೩ ವರುಷ ಒಟ್ಟು " ನಾನು ಅವಕ್ಕಾದೆ ", " ಮುಂದೆ ?" ಕೇಳಿದೆ . "ನನ್ನದೇ ಒಂದು ದೇವಸ್ಥಾನ ಕಟ್ಟಬೇಕು , ಮುಂದಿನ ತಿಂಗಳು ಮಾಯಪುರಕ್ಕೆ ಹೋಗುತ್ತೇನೆ , ಅಲ್ಲಿ ೬ ತಿಂಗಳು ಪೂಜಾ ವಿಧಿ ವಿಧಾನ ಕಲಿಸುತ್ತಾರೆ , ಮತ್ತೆ ಅಲ್ಲೇ ಬ್ರಹ್ಮಚಾರ್ಯ ತೆಗೆದುಕೊಳ್ಳುತ್ತೇನೆ " ಅಂದ , ನಾನು "ಮದುವೆ ? " ಅಂದೆ . "ಬ್ರಹ್ಮಚಾರ್ಯ ಅಂದೆ ಸನ್ಯಾಸ ಅಲ್ಲ " ಅಂದ . ನಾನು " ಓಹ್ !" ಎಂದು ಸುಮ್ಮನಾದೆ . ""ನಿನಗೆ , ಹೇಗೆ ಅನ್ನಿಸಿತು , ಹೀಗಾಗಬೇಕು ಎಂದು , ಏನು ಇಡಿದಿಡುತ್ತದೆ ನಿನ್ನನ್ನು ಇಲ್ಲೇ ?" ಕೇಳಿದೆ . "ನಾನು , ಮೊದಲ ಬಾರಿ ದೇವಸ್ಥಾನಕ್ಕೆ ಹೋದಾಗಲೇ ಆ ಭಾವ ಮೂಡಿತು ಹಾಗಾಗಿ ಅಲ್ಲೇ ನೆಲೆಯೂರಿದೆ , ಭಗವದ್ಗೀತೆ ಎರಡು ಮೂರು ಬಾರಿ ಓದಿದ ಮೇಲೆ ಇದರ ಹೊರತು ಬೇರಾವುದು ಹಿತವಿಲ್ಲ ಎನ್ನಿಸಿ , ಭಗವದ್ ಚಿಂತನೆಯಲ್ಲೇ ತೊಡಗಿಸಿಕೊಂಡಿದ್ದೇನೆ " ಅಂದ . "ಏನು ಕಲಿತೆ , ಗೀತೆಯಿಂದ ??" ಅಂದೆ , ಆತ ನನ್ನಿಂದ ಈ ಪರಿಯ ವಿಚಾರಣೆ ಅಪೇಕ್ಷಿರಲಿಲ್ಲ ಎಂದು ಕಾಣುತ್ತದೆ ಕೊಂಚ ಕಸಿವಿಸಿಯದಂತೆ ಕಂಡ ನಂತರ "ನಾನು ಯಾವ ಕಾರಣಕ್ಕೆ ಇಲ್ಲಿ ಹುಟ್ಟಿದ್ದೇನೆ ಎಂದು ತಿಳಿದಿದೆ ಅದಕ್ಕೆ ಗೀತೆ ಕಾರಣ " ಎಂದ . ಅಲ್ಲಿಗೆ ನಿಟ್ಟುಸಿರು ಬಿಟ್ಟು ನನ್ನ ಪ್ರಶ್ನೆಗಳನ್ನು ನಿಲ್ಲಿಸಿದೆ .
ಆತ ಶ್ರೀರಂಗಪಟ್ಟಣದಲ್ಲಿ ಇಳಿದು ಒಂದು ಬ್ಯಾಗಿನ ತುಂಬಾ ಇದ್ದ ಭಗವದ್ಗೀತೆಯ ಪುಸ್ತಕಗಳ್ಳನ್ನು ಇಡಿದು "ಗೋಸಾಯಿ ಘಾಟ್ ಬಳಿ , ಗೀತೆ ಮಾರಲು ಹೋಗ್ತಿದೀನಿ " ಅಂತ ಹೇಳಿ ಇಳಿದು ಹೋದ . ಇಳಿದ ಮೇಲು ಕಿಟಕಿಯಿಂದ ನನ್ನ ಕಡೆ ಕೈ, ಬೀಸಿ ನಕ್ಕು ಹೊರಟ , ನಾನು ಅವನು ಹೋದ ದಾರಿಯ ಕಡೆ ನೋಡುತ್ತ ಕೂತೆ , ರೈಲು ಆತನ ವಿರುದ್ದ ದಿಕ್ಕಲ್ಲಿ ತನ್ನ ಪಾಡಿಗೆ ಹೊರಟಿತು .
ಈ ಎರಡು ಘಟನೆ ನನ್ನನ್ನು ಒಂದೇ ಬಗೆಯಾಗಿ ಕಾಡುತ್ತಿವೆ , ದೇವರ ಬಗ್ಗೆಗಿನ ಕುತೂಹಲಕ್ಕೆ ಜೀವನವ ಮುಡುಪಾಗಿಟ್ಟ ಬಾಲಕ ಮತ್ತು ದೇವರನ್ನು ಪಡೆದೆ ತೀರುತ್ತೇನೆ ಎಂಬ ಆ ವೃದ್ಧರ ಅಚಲತೆ ಎರಡು ವಿಶಿಷ್ಟ .
ಇಂತಹವರು ಕೇವಲ ಉದಾಹರಣೆ ಅಷ್ಟೆ , ಇಂತಹವರು ಸಾವಿರಾರು ಮಂದಿ , ನಮ್ಮ ನಿಮ್ಮ ಮಧ್ಯೆ ಕಾಣಸಿಗುತ್ತಾರೆ . ಇವರೆಲ್ಲರಲ್ಲೂ ಒಂದು ಶ್ರದ್ದೆಯಿದೆ , ತಾಳ್ಮೆಯಿದೆ , ಶಿಸ್ತು , ಸ್ಥಿರತೆಯಿದೆ . ಅವರು ಹುಡುಕ್ಕುತ್ತಿರುವುದು ಅವರಿಗೆ ದೊರಕಲಿ ಎಂದು ಆಶಿಸುತ್ತ ನನ್ನ ಈ ಸಣ್ಣ ಲೇಖನ ಮುಗಿಸುತ್ತೇನೆ . ಒಟ್ಟಾರೆ ಯಾವ ಕಾರಣಕ್ಕಾದರೂ ಸರಿ , ವಿಜ್ಞಾನ , ಸಿನಿಮಾ , ಮಾಡುತ್ತಿರುವ ವೃತ್ತಿ, ಕುಟುಂಬ ಯಾವುದಾದರು ಸರಿ ಅದಕ್ಕೆ ಜೀವನವ ಮುಡುಪಾಗಿಡುವುದಕ್ಕೆ ಒಂದು ಗುಂಡಿಗೆ ಬೇಕು , ಆ ಗುಂಡಿಗೆಗೆ ನನ್ನದೊಂದು ನಮನವಿರಲಿ .
ಆಸ್ತಿಕತೆ ಒಳ್ಳೇದು